ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಯಾರೆಲ್ಲ ಅರ್ಹರು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

ಬೆಂಗಳೂರು: ನಿನ್ನೆ ನಡದೆ ನೂತನ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ.

ನೂತನ ರಾಜ್ಯ ಸರಕಾರವು ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಹೆಸರಿನ 5 ನೂತನ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಗೃಹಜ್ಯೋತಿ ಯೋಜನೆಯಡಿ  200 ಯುನಿಟ್‌ವರೆಗೆ ಉಚಿತ ವಿದ್ಯುತ್, ಅನ್ನಭಾಗ್ಯದಡಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರ ಕುಟುಂಬ ಸದಸ್ಯರಿಗೆ ಈ ಯೋಜನೆಯಡಿ ತಲಾ 10 ಕೆ.ಜಿ ಉಚಿತ ಆಹಾರಧಾನ್ಯ, ಗೃಹಲಕ್ಷ್ಮಿ ಯೋಜನೆಯಡಿ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ ರೂ. 2000 ನೇರ ವರ್ಗಾವಣೆ, ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ, ಯುವನಿಧಿ
ಯೋಜನೆಯಡಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಉತ್ತಿರ್ಣರಾದ ನಿರುದ್ಯೋಗಿ  ಯುವಜನರಿಗೆ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.

5 ಗ್ಯಾರಂಟಿ ಯೋಜನೆಗಳ ಸಂಪೂರ್ಣ ವಿವರ ಹೀಗಿದೆ:

ಗ್ಯಾರಂಟಿ ನಂ. 1 "ಗೃಹಜ್ಯೋತಿ":

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಉಚಿತ ವಿದ್ಯುತ್ ಒದಗಿಸಲು  ನಿನ್ನೆ )2 ಜೂನ್ 2023) ಶುಕ್ರವಾರದಂದು ಸಚಿವ ಸಂಪುಟವು ಅನುಮೋದನೆ ನೀಡಲಾಗಿದ್ದು, ಉಚಿತ ವಿದ್ಯುತ್ ಯೋಜನೆಯ ದುರ್ಬಳಕೆ ತಡೆಯಲು ಈ ಯೋಜನೆಯಡಿ ಬಳಕೆದಾರರ ಕಳೆದ 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಯ ಮೇಲಿನ ಶೇ. 10 ರಷ್ಟು ಉಚಿತ ವಿದ್ಯುತ್ ಒದಗಿಸಲಾಗುತ್ತದೆ.

ನಿಯಮಗಳು:

ಜುಲೈ 1ರ ವರೆಗಿನ ವಿದ್ಯುತ್ ಬಳಕೆಗೆ ಸಂಬಂಧಿಸಿದ ಬಿಲ್ಲನ್ನು ಬಳಕೆದಾರರು ಪಾವತಿಸಬೇಕು.

ಆಗಸ್ಟ್ ತಿಂಗಳಿನಿಂದ ಈ ಯೋಜನೆಯ ಫಲಾನುಭವಿಗಳು ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ಜುಲೈ 1ರಿಂದ ಬಳಕೆಯಾಗುವ ವಿದ್ಯುತ್ ಗೆ ಈ ಯೋಜನೆ ಅನ್ವಯವಾಗುತ್ತದೆ.

ಉಚಿತ ವಿದ್ಯುತ್ ಲೆಕ್ಕಾಚಾರ ಹೀಗಿದೆ:

ಉದಾಹರಣೆಗೆ ಒಂದು ಮನೆಯವರು ಕಳೆದ 12 ತಿಂಗಳಲ್ಲಿ ಎಷ್ಟು ವಿದ್ಯುತ್ ಖರ್ಚು ಮಾಡಿದ್ದೀರೋ ಅದರ ಆಧಾರದ ಮೇಲೆ ಉಚಿತ ವಿದ್ಯುತ್ ಯೋಜನೆ ಸಿಗಲಿದೆ. ಅಂದರೆ ನೀವು ಕಳೆದ 12 ತಿಂಗಳಲ್ಲಿ 70 ಯೂನಿಟ್ ಬಳಸಿದ್ದರೆ, ಈಗ 10% ಹೆಚ್ಚಿಗೆ ಸೇರಿ, 80 ಯೂನಿಟ್ ಬಳಸಬಹುದು. ಆಗ ನೀವು ಅದಕ್ಕೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ. ಒಂದು ವೇಳೆ ಈಗ ಅಂದರೆ ಉಚಿತ ವಿದ್ಯುತ್ ಯೋಜನೆ ಜಾರಿಯಾದ ನಂತರ ನೀವು ಏಕಾಏಕಿ 70 ರಿಂದ 85 ಅಥವಾ 90 ಯೂನಿಟ್ ಬಳಸಿದರೆ ಉಚಿತ ಯೋಜನೆ ಅನ್ವಯವಾಗುವುದಿಲ್ಲ. ಉಚಿತ ಕೊಡುತ್ತಾರೆ ಎಂದು ದುರ್ಬಳಕೆ ಮಾಡುವುದನ್ನು ತಪ್ಪಿಸಲು ಈ ನಿಯಮ ಮಾಡಲಾಗಿದೆ. 

ಗ್ಯಾರಂಟಿ ನಂ.2 "ಅನ್ನಭಾಗ್ಯ" :

ಹಸಿವುಮುಕ್ತ ಕರ್ನಾಟಕ ಎಂಬ ಶಿರ್ಷಿಕೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರ ಕುಟುಂಬ ಸದಸ್ಯರಿಗೆ ಈ ಯೋಜನೆಯಡಿ ತಲಾ 10 ಕೆ.ಜಿ ಉಚಿತ ಆಹಾರಧಾನ್ಯ.

ಜೂನ್ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಹಾಗೂ ಆಹಾರ ಧಾನ್ಯಗಳ ಖರೀದಿ ಮಾಡಬೇಕಿರುವುದರಿಂದ ಜುಲೈ 1ರಿಂದ ಈ ಯೋಜನೆಯನ್ನು ಜಾರಿ ಅಗಲಿದೆ ಎಂದು ತಿಳಿಸಲಾಗಿದೆ.

ದನ್ನೂ ಓದಿ: ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಕುರಿತು ಪ್ರಕಟಣೆ! ಯಾವೆಲ್ಲ ಬಿತ್ತನೆ ಬೀಜ ಲಭ್ಯ?

ಗ್ಯಾರಂಟಿ ನಂ.3 "ಗೃಹಲಕ್ಷ್ಮಿ"

ಕುಟುಂಬ ನಿರ್ವಹಣೆಗಾಗಿ ಆರ್ಥಿಕ ನೆರವು ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ

ರೂ. 2000 ನೇರ ವರ್ಗಾವಣೆ ಮಾಡಲು ಸಂಪುಟ ಅನುಮೋದನೆ ನೀಡಿದೆ.

ನಿಯಮಗಳು:

  • ಈ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಿ, ಮನೆಯ ಯಜಮಾನಿ ಯಾರು ಎಂಬುದನ್ನು ಘೋಷಿಸಬೇಕು.
  • ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮಾಹಿತಿ ಒದಗಿಸಬೇಕು.
  • ಜೂನ್ 15 ರಿಂದ ಜುಲೈ 15 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಜುಲೈ 15 ರಿಂದ ಆಗಸ್ಟ್ 15ರ ಅವಧಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಆಗಸ್ಟ್ 15ರ ಸ್ವಾತಂತ್ರ್ಯ
  • ದಿನಾಚರಣೆಯ ದಿನ ಯೋಜನೆಗೆ ಚಾಲನೆ ನೀಡುವುದಾಗಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗ್ಯಾರಂಟಿ ನಂ.4  "ಶಕ್ತಿ ಯೋಜನೆ" :

ಸ್ತ್ರೀ ಸಬಲೀಕರಣದ ಮೂಲಕ ಸಮಸಮಾಜದತ್ತ ಹೆಜ್ಜೆ ಎನ್ನುವ ಉದ್ದೇಶದೊಂದಿಗೆ ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ.

  • ಜೂನ್ 11 ರಿಂದ ಯೋಜನೆಗೆ ಚಾಲನೆ.
  • ಶೇ. 94 ರಷ್ಟು ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ.
  • ಬಸ್‌ಗಳಲ್ಲಿ ಶೇ. 50 ರಷ್ಟು ಸೀಟುಗಳು ಪುರುಷರಿಗೆ ಮೀಸಲು ಇಡಲಾಗಿದೆ.

ಗ್ಯಾರಂಟಿ ನಂ.5 "ಯುವನಿಧಿ" 

ನಿರುದ್ಯೋಗಿ ಯುವಜನರ ಕನಸಿಗೆ ಆರ್ಥಿಕ ಬೆಂಬಲ  ನೀಡವ ದೆಸೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲಾ ವಿಧದ ಪದವೀಧರ ಯುವಕ-ಯುವತಿಯರು, ಡಿಪ್ಲೊಮಾ ಹೊಂದಿದವರಿಗೆ ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಬವುದಾಗಿದೆ.

ನಿಯಮಗಳು:

ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆಯನ್ನು ಅರ್ಹ ಪಲಾನುಭವಿಗಳ ಖಾತೆಗೆ ವರ್ಗಾಹಿಸಲಾಗುತ್ತದೆ.

ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಸೌಲಭ್ಯ ಒದಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.